ಮಹಿಳಾ ಆಯೋಗ ಶ್ವೇತಪತ್ರ ಹೊರಡಿಸಲಿ: ಎಎಪಿ ಸವಾಲು

ಸಂತ್ರಸ್ತ್ರರ ಭೇಟಿ ಹಾಗೂ ಮಹಿಳೆಯರ ದೂರುಗಳನ್ನು ಇತ್ಯರ್ಥ ಪಡಿಸಿರುವ ಬಗ್ಗೆ ರಾಜ್ಯ ಮಹಿಳಾ ಆಯೋಗವು ಶ್ವೇತಪತ್ರ ಹೊರಡಿಸಬೇಕು ಎಂದು ಆಮ್‌ ಆದ್ಮಿ ಪಾರ್ಟಿ ಆಗ್ರಹಿಸಿದೆ.




ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಎಪಿಯ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಕುಶಲಾ ಸ್ವಾಮಿಯವರು, “ಮಕ್ಕಳು ಹಾಗೂ ತಾಯಿಯ ನಡುವಿನದು ಅವಿನಾಭಾವ ಸಂಬಂಧವಾಗಿದೆ. ಮಗು ದೌರ್ಜನ್ಯಕ್ಕೆ ಒಳಗಾದರೆ ಹೆಚ್ಚು ಕಷ್ಟ ಅನುಭವಿಸುವುದು ತಾಯಿ. ಆದ್ದರಿಂದ ಮಕ್ಕಳ ಮೇಲಿನ ದೌರ್ಜನ್ಯ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡುರವರ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದೆ. ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಎಂಬ ಭೇದ ತೋರಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಬದಲು, ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಆಯೋಗ ಮುಂದಾಗಬೇಕು” ಎಂದು ಆಗ್ರಹಿಸಿದರು.

“ಮಹಿಳಾ ಆಯೋಗದ ನಿಷ್ಕ್ರಿಯತೆ ವಿರುದ್ಧ ಸೆ. 28ರಂದು ಆಮ್‌ ಆದ್ಮಿ ಪಾರ್ಟಿಯು ಬೃಹತ್‌ ಪ್ರತಿಭಟನೆ ಮಾಡಿತ್ತು. ನಮ್ಮ ಹೋರಾಟಕ್ಕೆ ಪ್ರತಿಕ್ರಿಯಿಸಿದ ಪ್ರಮೀಳಾ ನಾಯ್ಡುರವರು ಆಯೋಗ ನಿಷ್ಕ್ರಿಯವಾಗಿಲ್ಲ ಎಂದಿದ್ದಾರೆ. ನಾಡಿನ ಮಹಿಳೆಯರ ಮೇಲೆ ಸಾಲುಸಾಲು ದೌರ್ಜನ್ಯ ಪ್ರಕರಣಗಳು ನಡೆಯುವಾಗ ಮೌನವಾಗಿದ್ದ ಅವರು ನಮ್ಮ ಹೋರಾಟದ ಬಗ್ಗೆಯಾದರೂ ಪ್ರತಿಕ್ರಿಯಿಸಿದ್ದಾರೆ ಎನ್ನುವುದೇ ಸಮಾಧಾನದ ಸಂಗತಿ. ಅವರ ಮಾತು ನಿಜವೇ ಆಗಿದ್ದರೆ, ಆಯೋಗದ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಆಯೋಗಕ್ಕೆ ಎಷ್ಟು ದೂರುಗಳು ಬಂದಿವೆ, ಎಷ್ಟು ಸಂತ್ರಸ್ತರನ್ನು ಅಧ್ಯಕ್ಷರು ಭೇಟಿಯಾಗಿದ್ದಾರೆ, ಎಷ್ಟು ಮಹಿಳೆಯರಿಗೆ ನ್ಯಾಯ ಕೊಡಿಸಲಾಗಿದೆ, ಮಹಿಳೆಯರ ಸುರಕ್ಷತೆಗೆ ಆಯೋಗ ಏನೇನು ಮಾಡಿದೆ ಎಂಬ ಬಗ್ಗೆ ಶ್ವೇತ್ರಪತ್ರದಲ್ಲಿ ಬಹಿರಂಗಪಡಿಸಲಿ” ಎಂದು ಕುಶಲಾ ಸ್ವಾಮಿ ಸವಾಲು ಹಾಕಿದರು.

ಆಮ್‌ ಆದ್ಮಿ ಪಾರ್ಟಿಯ ಮಹಿಳಾ ಮುಖಂಡರಾದ ಉಷಾ ಮೋಹನ್‌ರವರು ಮಾತನಾಡಿ, “ಎಎಪಿ ಆಡಳಿತವಿರುವ ದೆಹಲಿಯಲ್ಲಿ ಇರುವುದು ಕೇವಲ ಮೂರು ಕೋಟಿ ಜನಸಂಖ್ಯೆ. ಆದರೂ ಅಲ್ಲಿನ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್‌ರವರ ನೇತೃತ್ವದಲ್ಲಿ ಕಳೆದ ಐದು ವರ್ಷಗಳಲ್ಲಿ 1,00,672 ಪ್ರಕರಣಗಳಿಗೆ ಸಂಬಂಧಿಸಿ 1,42,234 ಜನರ ವೈಯಕ್ತಿಕ ವಿಚಾರಣೆ ನಡೆಸಲಾಗಿದೆ. ಸಹಾಯವಾಣಿಗೆ ಕರೆ ಮಾಡಿ ಕಷ್ಟ ಹೇಳಿಕೊಂಡ ದೆಹಲಿಯ 4.25 ಲಕ್ಷ ಮಹಿಳೆಯರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗಿದೆ. ದೆಹಲಿಯ ಮಹಿಳಾ ಆಯೋಗವು 250ಕ್ಕೂ ಶಿಫಾರಸ್ಸುಗಳನ್ನು ಸರ್ಕಾರ ಹಾಗೂ ಪ್ರಾಧಿಕಾರಕ್ಕೆ ಕಳುಹಿಸಿದೆ. ಇದೇ ರೀತಿ, ನಮ್ಮ ಕರ್ನಾಟಕದ ಮಹಿಳಾ ಆಯೋಗದ ಸಾಧನೆಯನ್ನು ತಿಳಿಯುವ ಸಂಪೂರ್ಣ ಹಕ್ಕು ರಾಜ್ಯದ ಮಹಿಳೆಯರಿಗೆ ಇದೆ. ಈ ಕುರಿತು ಆಯೋಗವು ಶ್ವೇತ ಪತ್ರ ಹೊರಡಿಸಿದರೆ ಅದರ ನಿಜಬಣ್ಣ ಬಯಲಾಗುತ್ತದೆ” ಎಂದು ಹೇಳಿದರು.

Post a Comment

0 Comments